ಪಣಜಿ: ದಾಳಿಕೋರರಿಂದ ಧ್ವಂಸಗೊಂಡ ದೇವಾಲಯಗಳ ಪುನರ್ ನಿರ್ಮಾಣಕ್ಕಾಗಿ ಎಲ್ಲಾ ದೇವಾಲಯದ ಸಂಘಟನೆಗಳು, ಭಕ್ತರು, ಅರ್ಚಕರು ಮತ್ತು ಹಿಂದುತ್ವನಿಷ್ಠ ಸಂಘಟನೆಗಳ ಪರವಾಗಿ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸಲು ಗೋವಾದಲ್ಲಿ ನಡೆಯುತ್ತಿರುವ 10ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಎರಡನೇ ದಿನದಂದು ವಕೀಲರುಗಳು ನಿರ್ಧಾರ ಕೈಗೊಂಡಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ರಾಮಮಂದಿರ, ಕಾಶಿ, ಮಥುರಾ, ಕುತುಬ್ಮಿನಾರ್, ತಾಜ್ಮಹಲ್ ಮತ್ತು ಭೋಜಶಾಲಾ ಮಾತ್ರವಲ್ಲದೆ ಸಾವಿರಾರು ದೇವಾಲಯಗಳನ್ನು ಮೊಘಲರು ಮತ್ತು ಪೋರ್ಚುಗೀಸರು ಮುಂತಾದ ದಾಳಿಕೋರರು ಕೆಡವಿದ್ದಾರೆ. ಭಾರತ ಸ್ವತಂತ್ರವಾಯಿತು; ಆದರೆ ಹಿಂದೂಗಳ ಪುರಾತನ ಧಾರ್ಮಿಕ ಸ್ಥಳಗಳು ವಿದೇಶಿ ಗುಲಾಮಗಿರಿಯಲ್ಲಿ ಉಳಿಯಿತು ಎಂದಿರುವ ವಕೀಲರುಗಳು, ಗೋವಾದಲ್ಲಿ ಧ್ವಂಸಗೊಂಡ ದೇವಾಲಯಗಳ ಬಗ್ಗೆ ಪುರಾವೆಗಳು ಸಿಕ್ಕಿದ್ದಲ್ಲಿ ಆ ಕುರಿತು ನ್ಯಾಯಾಂಗ ಹೋರಾಟ ಮಾಡಲು ನಿರ್ಧರಿಸಿದ್ದಾರೆ. ಈ ಹೋರಾಟಕ್ಕೆ ಗೋಮಾಂತಕದ ಜನತೆಯು ತಮ್ಮಲ್ಲಿ ಲಭ್ಯವಿರುವ ಪುರಾವೆಗಳನ್ನು ಹಿಂದೂ ಜನಜಾಗೃತಿ ಸಮಿತಿಗೆ ಒದಗಿಸುವಂತೆ ಪೋಂಡಾದ ಶ್ರೀರಾಮನಾಥ ದೇವಾಲಯದ ವಿದ್ಯಾಧಿರಾಜ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ.
ವಕೀಲ ವಿಷ್ಣು ಜೈನ್ ಮಾತನಾಡಿ, ದೇವಸ್ಥಾನಗಳ ಪುನರ್ ನಿರ್ಮಾಣದ ಈ ಅಭಿಯಾನದಲ್ಲಿ ವಿವಾದಿತ ಸ್ಥಳದ ಪೌರಾಣಿಕ ಮಹತ್ವ, ನಾಶ ಮಾಡಿರುವ ಐತಿಹಾಸಿಕ ಪುರಾವೆಗಳು, ಖಟ್ಲೆಯ ಇತಿಹಾಸ, ಸಾಕ್ಷ್ಯ ಮತ್ತು ಕಾನೂನುರೀತ್ಯ ಆಧಾರ ಇತ್ಯಾದಿಗಳ ಅಧ್ಯಯನ ಮಾಡಲಾಗುವುದು. ಸಂಶೋಧನೆಯ ಕೊನೆಯಲ್ಲಿ ದೇವಾಲಯಗಳನ್ನು ಕೆಡವಲಾಗಿದೆ ಎಂದು ಸಾಬೀತಾದರೆ, ನಾವು ಅವುಗಳ ಜೀರ್ಣೋದ್ಧಾರಕ್ಕಾಗಿ ನ್ಯಾಯಾಂಗ ಹೋರಾಟವನ್ನು ಪ್ರಾರಂಭಿಸುತ್ತೇವೆ. ಪ್ರಸ್ತುತ ಅನೇಕ ವಿವಾದಿತ ಸ್ಥಳಗಳು ಪುರಾತತ್ವ ಸಮೀಕ್ಷೆ ಇಲಾಖೆಯ ನಿಯಂತ್ರಣದಲ್ಲಿವೆ. ಇದು ಖಾತೆಗಳ ಕಾಯಿದೆ 1958ರ ಸೆಕ್ಷನ್ 16ರ ವಿರುದ್ಧ ಕಾರ್ಯನಿರ್ವಹಿಸುತ್ತಿದೆ. ಓರ್ವ ನಿಜವಾದ ಹಿಂದೂವಾಗಿ ನಾವು ಅಂತಹ ದೇವಾಲಯಗಳನ್ನು ಪುನರ್ನಿರ್ಮಿಸುವ ಮೂಲಕ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಪುನರ್ ಸ್ಥಾಪಿಸಲು ಪ್ರತಿಜ್ಞೆ ಮಾಡುತ್ತಿದ್ದೇವೆ ಎಂದು ಹೇಳಿದರು.
‘ಭಾರತ್ ಮಾತಾ ಕೀ ಜೈ’ ಸಂಘಟನೆಯ ಗೋವಾ ರಾಜ್ಯ ಸಂಘಚಾಲಕ ಸುಭಾಷ ವೇಲಿಂಗ್ಕರ ಮಾತನಾಡಿ, ಪೋರ್ಚುಗೀಸರ ಆಳ್ವಿಕೆಯಲ್ಲಿ 1 ಸಾವಿರಕ್ಕೂ ಹೆಚ್ಚು ದೇವಾಲಯಗಳನ್ನು ಧ್ವಂಸ ಮಾಡಲಾಯಿತು. ಇವುಗಳಲ್ಲಿ ಎರಡು ದೇವಾಲಯಗಳು ಚರ್ಚ್ ದಾಳಿಯಿಂದ ಉಳಿದುಕೊಂಡಿವೆ. ಅದರಲ್ಲಿ ಒಂದು ವರೇಣ್ಯಪುರಿ (ವೆರ್ಣಾ) ಮತ್ತು ಇನ್ನೊಂದು ಶ್ರೀವಿಜಯದುರ್ಗಾ ದೇವಿಯ ದೇವಾಲಯವಾಗಿದೆ. ಈ ದೇವಸ್ಥಾನಗಳನ್ನು ರಾಜ್ಯ ಪುರಾತತ್ವ ಇಲಾಖೆ ಸಂರಕ್ಷಿತ ಪ್ರದೇಶ ಎಂದು ಘೋಷಿಸಿದ್ದರೂ ಚರ್ಚ್ ಗಳು ದೇವಾಲಯದ ಭೂಮಿಯನ್ನು ಕಬಳಿಸುವ ಷಡ್ಯಂತ್ರ ನಡೆಸುತ್ತಿದೆ. ಈ ದಾಳಿಯ ವಿರುದ್ಧ ಹಿಂದೂ ಭಕ್ತರು ಒಗ್ಗೂಡಿ ಹೋರಾಡಬೇಕಾಗಿದೆ ಎಂದು ಕರೆ ನೀಡಿದರು.
ಈ ವೇಳೆ ವಾರಣಾಸಿಯ ವಕೀಲ ಮದನ ಮೋಹನ ಯಾದವ್, ‘ಗೋವಾ ಮಂದಿರ ಮಹಾಸಂಘ’ದ ಕಾರ್ಯದರ್ಶಿ ಜಯೇಶ ಥಳಿ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ ರಮೇಶ ಶಿಂಧೆ ಇದ್ದರು.